ಸಾವಿನಂಚಿನ ಗೆರೆ

*ಸಾವಿನಂಚಿನ ಗೆರೆ*

ಇದ್ದಕ್ಕಿದ್ದಂತೆ ಹೊಳೆಯಿತವನಿಗೆ
ಬದುಕು ನಶ್ವರವೆಂದು!
ದೀರ್ಘಮೌನಿಯಾದ! 
ಸಾವಿನ ಗೆರೆ ದಾಟಲು.
ತಾನು ಇಂದೋ ನಾಳೆಯೋ
ಶಿವನ ಆಲಯಯನ್ನು, ಶವದ ಮನೆಯನ್ನು 
ಸೇರಬಹುದೆನಿಸಿತು...
ಬಂಧು-ಬಳಗಕ್ಕಿಲ್ಲ ಚಿಂತೆ!
ಭಯದ ಗೆರೆಗಳಂತೂ
 ಇಲ್ಲವೇ ಇಲ್ಲ.
ಲೋಕಕ್ಕಂತೂ....?

ಬೇಸರಿಸಿತು ಮನ
ಸಿದ್ದಗೊಂಡಿತು ತನು
ಹದಗೊಂಡ ದೇಹಾತ್ಮಗಳು
ಸನ್ನದ್ದಗೊಂಡವು
ಸಾವಿನ ಕದ ತೆರೆಯಲು..
ಯೋಗ-ಧ್ಯಾನದಿ
ವದನ ಪ್ರಸನ್ನಗೊಳಿಸಿ
ಕ್ರಾಪು ತೆಗೆದು, ಸೇವ್ ಮಾಡಿ
ಆಭ್ಯಂಜನಕಿಳಿದ,
ನಗುಮೊಗದಿ ಮೆರವಣಿಗೆ ಹೊರಟ, ಗರಿಗರಿ ಶ್ವೇತವಸ್ತ್ರದೊಳು.

ಊರೆಲ್ಲ ಸುತ್ತಾಡಿ, ಎಲ್ಲರ
ನಾಲಿಗೆಯೊಳು ಒಂದಾಗಿ,
ಸ್ನೇಹಿತರು, ಬಂಧುಬಳಗಕೆಲ್ಲ
ಸಿಹಿಮಾತನುಣಿಸಿ, 
ಶುಕ-ಪಿಕಗಳ ಧ್ವನಿಗೂ
ಕಿವಿಯಾಗಿ, ಕವಿಯಾದ.

ಒಳಗಿನ ಭಯವನು
ಅದಮಿಟ್ಟುಕೊಂಡು,
ಕೊನೆಯ ಭೆಟ್ಟಿಯಲಿ
ಸಂಭ್ರಮಿಸಿ, ತೋರಿಕೆಯ ಖುಷಿಯಲಿ 
ನಕ್ಕು-ನಲಿದು, 
ಎಲ್ಲರೊಳಗೊಂದಾದ.

ಬದಲಾದ ನಡೆನುಡಿಗೆ
ಊರೆಲ್ಲ ಫಿದಾ!
ಮನೆಯ ಒಳಗೋಡೆಗಳಿಗೂ
ಅಚ್ಚರಿ!
ಆ ರಾತ್ರಿ! ಮಾತು! ಭೋಜನ! 
ಸಂಭ್ರಮದ ಹೊನಲು!

ಎಲ್ಲರ ಬಿಗಿದಪ್ಪಿ, 
ಕರುಳಕುಡಿಗಳ ಮುದ್ದಿಸಿ
ಬೀಳ್ಕೊಟ್ಟು, ಶಯನಗೃಹ ಹೊಕ್ಕ; ಒಲ್ಲದ ಮನಸಲಿ.

ಭಯಾತಂಕ ಬದಿಗೊತ್ತಿ,
ಕಣ್ಣೀರು ಬತ್ತಿಸಿ
ಚಿತ್ತಾತ್ಮಶುದ್ದಿಯೊಳು
ಸಾವಿನ ಮನೆಯ ಕದತಟ್ಟಿ,
ನಗುಮೊಗದಿ ಎದುರಾದ.
ಸಾವು ಬರಲಿಲ್ಲ!
ಇವನು ಬಿಡಲಿಲ್ಲ!.

ದಿನ-ತಿಂಗಳು-ವರ್ಷಗಳೇ
ಬೆನ್ನು ತಿರುಗಿಸಿದವು
ಇವನ ಮನದೊಡಲಿನ
ಮೆರವಣಿಗೆ ಸಾಗಿತ್ತು
ನಿರಾತಂಕದಲಿ!
ಖುಷಿಯ ಬುಗ್ಗೆ
ಮನೆ-ಮನದಲ್ಲೂ
ನಿತ್ಯ ಅನುರಣಿಸಿತ್ತು.
ಸಾವಿಗೆ ಸಾವಾಗಿತ್ತು.

ಎಂ.ಡಿ.ಚಿತ್ತರಗಿ
ಹುನಗುಂದ
9686019177

Popular posts from this blog

ಕಥಾತಪಸ್ವಿ - ಅಬ್ಬಾಸ್ ಮೇಲಿನಮನಿ

ಸೆಲ್ಪೀ........

ಕವಿತೆ - ಗಾಂಧಿ!!!